ಬೆಳಕಿಂಡಿಯ ಕತೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಬೆಳಕಿಂಡಿಯ ಕತೆಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 13, 2026

ಒಂದೊಮ್ಮೆ ಕರುಣಾಮಯಿಯಾಗಿದ್ದವಳು (ಬೆಳಕಿಂಡಿಯ ಕತೆಗಳು - 82)


 ಎಲ್ಲರ ಕಷ್ಟಕ್ಕೆ ಕರಗುವ ಕರುಣಾಮಯಿಯಾಗಿದ್ದವಳನ್ನು, ಸಹಾಯಕ್ಕೆ ನಿಂತು ಸುಧಾರಿಸುವವಳನ್ನು ಮೋಸದಿಂದ  ಯಾಮಾರಿಸಿದವರೇ ಹೆಚ್ಚು. ವಾಸ್ತವದ ಕಟುಸತ್ಯ ಅವಳನ್ನು ಬುದ್ಧಿವಂತೆಯಾಗಿಸಿತು. 

ಕರುಣಾಮಯಿಯನ್ನು ಕಟು ಹೃದಯಿಯಾಗಿಸಿದವರೇ ಈಗ ಅವಳು ಕಲ್ಲೆಂದು ದೂರುತ್ತಿರುವುದು ವಿಪರ್ಯಾಸ. 

~ವಿಭಾ ವಿಶ್ವನಾಥ್

ಪುಸ್ತಕಪ್ರೇಮಿಯ ಆಸೆಗಣ್ಣು (ಬೆಳಕಿಂಡಿಯ ಕತೆಗಳು - 81)


ಹಲವು ತಿಂಗಳುಗಳಿಂದ ಪುಸ್ತಕ ಕೊಳ್ಳಲು ಹೋದಾಗಲೆಲ್ಲಾ ಆಸೆಗಣ್ಣುಗಳಿಂದ ತನ್ನಿಷ್ಟದ ಪುಸ್ತಕವನ್ನು ನೋಡುತ್ತಿದ್ದರೂ.. ದುಬಾರಿಯಾದ ಆ ಬೃಹತ್ ಕಾದಂಬರಿಯ ಕೊಳ್ಳುವಿಕೆಯನ್ನು ಮುಂದೂಡುತ್ತಲೇ ಇದ್ದಳು. ಅವಳ ಪ್ರತಿಭೆಗೆ ಪ್ರತಿಫಲವೆಂಬಂತೆ.. ಮನದಾಸೆಯನ್ನು ಅರಿತಂತೆ ಅದೇ ಪುಸ್ತಕ ಬಹುಮಾನವಾಗಿ ಸಿಕ್ಕಾಗ ಅವಳ ಸಂತೋಷವಂತೂ ವರ್ಣಿಸಲಸದಳ.

~ವಿಭಾ ವಿಶ್ವನಾಥ್

ಭಾನುವಾರ, ಸೆಪ್ಟೆಂಬರ್ 6, 2026

ವಿಶೇಷ ಮುತ್ತು (ಬೆಳಕಿಂಡಿಯ ಕತೆಗಳು - 80)


 ಅವನು ಒರಟೊರಟಾಗಿ ಅವಳನ್ನು ಅಪ್ಪಿ ಹಿಡಿದು ಅವಳ ಕೆನ್ನೆಗೆ ಜೊಲ್ಲನ್ನು ಸಹಾ ಸೇರಿಸಿ ಮುತ್ತು ಕೊಡುತ್ತಿದ್ದರೆ ಅವಳ ಕಣ್ಣಲ್ಲಿ ನೂರು  ಸೂರ್ಯರ ಪ್ರಕಾಶ ಮಿನುಗುತ್ತಿತ್ತು.


ಅಮ್ಮನಿಗೆ ಅದು ತನ್ನ ವಿಶೇಷ ಚೇತನ ಮಗುವಿನ ಮೊದಲ ಮುತ್ತು. ಅದು ಅವಳ ಪಾಲಿನ ವಿಶೇಷ ಮುತ್ತು. 


~ವಿಭಾ ವಿಶ್ವನಾಥ್

ಹಂಬಲದ ತಕ್ಕಡಿಯಲ್ಲಿ... (ಬೆಳಕಿಂಡಿಯ ಕತೆಗಳು - 79)

 


ಅವಳು ಹಂಬಲಿಸಿದ್ದು ಅವನ ಹಣ, ಐಶ್ವರ್ಯಕ್ಕಲ್ಲ ಬದಲಾಗಿ ಅವನ ಹಿಡಿ ಪ್ರೀತಿಗೆ. ಆದರೆ, ಅವನು ಅವಳ ಅಂತರಂಗವನ್ನು ಅರ್ಥ ಮಾಡಿಕೊಳ್ಳದೇ ಚಿನ್ನ, ವಜ್ರಗಳನ್ನು ತಂದು ಅವಳ ಮುಂದೆ ಸುರಿದ. 

ಆದರೂ, ಅವಳ ಹಂಬಲದ ತಕ್ಕಡಿಯಲ್ಲಿ ಸಂಪತ್ತಿಗಿಂತಲೂ, ಪ್ರೀತಿಗೇ ಹೆಚ್ಚು ತೂಕ. 


~ವಿಭಾ ವಿಶ್ವನಾಥ್

ಅಮೃತ (ಬೆಳಕಿಂಡಿಯ ಕತೆಗಳು - 78)

 


ವಿಷದ ತುತ್ತನ್ನೇ ಉಣಿಸಿದರೂ ಅದು ಅಮೃತ ಸಮಾನವಾಗುವುದು ಕಯಾದುವಂತಹಾ ತಾಯಿಯಿಂದ.. ಪ್ರಹ್ಲಾದನಂತಹಾ ನಂಬಿಕೆಯುಳ್ಳ ಮಾತೃಭಕ್ತ ಮಗನಿಂದ. ಅಮ್ಮ ನೀಡಿದ್ದು ಎಂದಿಗೂ ಅಮೃತಸಮಾನವೇ..


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 30, 2026

ತುತ್ತಿನ ಸವಿ (ಬೆಳಕಿಂಡಿಯ ಕತೆಗಳು - 77)

 


ಚಿಕ್ಕಂದಿನಲ್ಲಿ ಮುದ್ದೆಯನ್ನು ತುಪ್ಪದಲ್ಲಿ ಅದ್ದಿ ತಿನ್ನಿಸುವಾಗ, ಅನ್ನ ಉಪ್ಪು-ತುಪ್ಪ, ಸಾರನ್ನ, ಚಟ್ನಿ ಅನ್ನ, ಒಗ್ಗರಣೆ ಅನ್ನ, ಮೊಸರನ್ನ, ಹಾಲು ಅನ್ನ ಹೀಗೆ ಒಂದೊಂದು ದಿನ ಒಂದೊಂದು ರೀತಿ ತುತ್ತು ಬಾಯಿಗಿಡುತ್ತಾ ಮುದ್ದು ಮಾಡಿ ತಿನ್ನಿಸುತ್ತಾ, ಟಿ.ವಿ ಯ ಸಖ್ಯ ಬೆಳೆಸಲು ಬಿಡದೆ, ಚಂದಮಾಮನನ್ನು ತೋರಿಸುತ್ತಾ ಕತೆ ಹೇಳಿ ತಿನ್ನಿಸುವಾಗಿನ ನಿನ್ನ ಪಾತ್ರ ಈಗ ನನ್ನದಾಗಿದೆ ಅಮ್ಮ. 

ಮೊಬೈಲ್ ತೋರಿಸದೆ, ಕತೆಗಳನ್ನು ಹೇಳುತ್ತಾ ತುತ್ತು ಮಾಡಿ ತಿನ್ನಿಸುವಾಗಿನ ಆ ಸಂತೋಷದ ಸವಿ ಯಾವುದಕ್ಕೂ ಬೆಲೆಕಟ್ಟಲಾದದ್ದು. ಅದು ಸಂಸ್ಕೃತಿಯ ಸವಿಯೂ ಹೌದು.


~ವಿಭಾ ವಿಶ್ವನಾಥ್

ವಿಧಿಯ ಮಧುರ ಸಂಚು (ಬೆಳಕಿಂಡಿಯ ಕತೆಗಳು - 76)

 


ಆವತ್ತು ನೀನು ನನಗೆ ಸಿಗದಿದ್ದರೆ ಬಹುಶಃ ನಾನೂ, ನೀನೂ ಸತ್ತು ಯಾವ ಕಾಲವಾಗಿರುತ್ತಿತ್ತೋ.. 

ನಿನ್ನನ್ನು ನಿನ್ನಮ್ಮ ಅನಾಥಳನ್ನಾಗಿಸಿದ್ದರೆ, ನನ್ನನ್ನು ನಾನೇ ಅನಾಥಳನ್ನಾಗಿಕೊಂಡಿದ್ದೆ. ಬಹುಶಃ, ನಿನಗೆ ನಾನು ತಾಯಾಗಲು ಹಾಗೂ ನೀನು ನನ್ನ ಮಡಿಲ ಕೂಸಾಗಲು ವಿಧಿಯ ಬೆಸುಗೆಯೇ ಇದಾಗಿರಬಹುದಾ..?? ಅಂದು ನೀನು ನನಗೆ ಸಿಗದಿದ್ದರೆ, ನಮ್ಮಿಬ್ಬರ ಬಂಧ ಬೆಸೆಯದಿದ್ದರೆ ಈ 'ಮಡಿಲು' ಅನಾಥಾಲಯದ ಹುಟ್ಟಾದರೂ ಎಲ್ಲಿರುತ್ತಿತ್ತು ಹೇಳು..?? ನೀನು ಸಿಕ್ಕಿ 25 ವರ್ಷವಾಯಿತು. ಇಂದೂ ಮತ್ತಾವುದೋ ಕಂದ 'ಮಡಿಲು' ತುಂಬಲಿದೆ. ವಿಧಿಯ ಮಧುರ ಸಂಚು ಹೀಗೇ ನಮ್ಮೆಲ್ಲರನ್ನು ಬೆಸೆದುಬಿಡಲಿ.. 


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 23, 2026

ಮುಂದಿನ ಹಾದಿ (ಬೆಳಕಿಂಡಿಯ ಕತೆಗಳು - 75)

 


ಇದು ನಾನಾಗೇ ನಾನು ಮಾಡಿಕೊಂಡ ಬಂಧನ ಎನ್ನಲೋ ಅಥವಾ ಮನೆಯವರ ಒತ್ತಡಕ್ಕೆ ಮಣಿದು ಬಂಧಿಸಿಕೊಂಡದ್ದು ಎನ್ನಲೋ.. ಏನೇ ಆದರೂ ವಿವಾಹವೆಂಬ ಬಂಧನದಲ್ಲಿ ಸಿಲುಕಿಕೊಂಡದ್ದಂತೂ ಆಗಿದೆ.


ಎಲ್ಲರಿಗೂ ವಿವಾಹದ ನಂತರದ ಬದುಕು ಸುಲಭದ ಹಾದಿಯಾಗಿರುವುದಿಲ್ಲ. ಅವತ್ತು ನನ್ನ ಮುಂದೆ ಇದ್ದದ್ದು ಎರಡೇ ಆಯ್ಕೆಗಳು ಸಾವು ಇಲ್ಲವೇ ಹೋರಾಟದ ಬದುಕು. ಓದಿದ ನಾನೇ ಹೇಡಿಯಾದರೆ.. ಇಲ್ಲ, ಮುಂದಿನ ದಾರಿ ನಿಚ್ಚಳವಾಗಿತ್ತು. ಬಂಧನದಿಂದ ಹೊರ ಬಂದು ಓದಿದೆ. ಈಗ ಮನಃಶಾಸ್ತ್ರಜ್ಞೆಯಾಗಿದ್ದೇನೆ. ಎಲ್ಲರಿಗೂ ಮುಂದಿನ ಹಾದಿಗೆ ಬೆಳಕು ಬೀರಲು..

ಮುಂದಿನ ಹಾದಿಗೆ ಬೆಳಕು ಬೀರಲು ದೀಪ ತನ್ನನ್ನೇ ಸುಟ್ಟುಕೊಳ್ಳುವ ಕುರಿತು ನನಗೆ ಬೇಸರವಿಲ್ಲ.. ಬದಲಿಗೆ ಸಮರ್ಪಣೆಯ ಸಂತಸವಿದೆ. 

~ವಿಭಾ ವಿಶ್ವನಾಥ್

ಪಾತರದವಳು (ಬೆಳಕಿಂಡಿಯ ಕತೆಗಳು - 74)

 


ಬದುಕಲ್ಲಿ ಬಣ್ಣ ಹಚ್ಚದೆ ಬಣ್ಣ-ಬಣ್ಣದ ನಾಟಕ ಮಾಡಿ ಹಣ ಸಂಪಾದಿಸುವ ಬದಲು ದುಡಿದು ತಿನ್ನುವ ಇರಾದೆಯಲ್ಲಿ ತನ್ನ ಕಾಲ ಮೇಲೆ ತಾನು ನಿಲ್ಲುವ ಆಸೆಯಿಂದ ಪಾತರದವಳಾಗಿ ಬಣ್ಣ ಹಚ್ಚಿ ನಿಂತಳು.

ಲೋಕದ ಕಟು ನುಡಿಗೆ ಕೆಂದದೇ, ತನ್ನ ಆತ್ಮಾಭಿಮಾನವನ್ನು ಮಾಡಿಕೊಳ್ಳದೇ ತನ್ನ ಹೊಟ್ಟೆ ಹೊರೆದುಕೊಂಡು, ಕುಟುಂಬವನ್ನೂ ಸಾಕಿ ಸ್ವಾಭಿಮಾನದಿಂದ ಬೆಳೆದು ನಿಂತಳು. ಈಗ ಅವಳು ಬರೀ 'ಪಾತರದವಳಲ್ಲ' ಬದಲಾಗಿ 'ಅಭಿನೇತ್ರಿ'.

~ವಿಭಾ ವಿಶ್ವನಾಥ್

ಮುಂದಿನ ನಿಲ್ದಾಣ (ಬೆಳಕಿಂಡಿಯ ಕತೆಗಳು - 73)


ಈ ನಿಲ್ದಾಣದಲ್ಲಿ ಬಾಗಿಲು ಎಡಕ್ಕೆ ತೆರೆಯುತ್ತದೆ ಎಂದೋ ಬಲಕ್ಕೆ ತೆರೆಯುತ್ತದೆ ಎಂದೋ ಪ್ರಯಾಣಿಕರಿಗೆ ತಿಳಿಯುವಂತೆ ಹೇಳುತ್ತಾ ಇರುವ ಮೆಟ್ರೋ ಮುಂದಿನ ನಿಲ್ದಾಣವನ್ನೂ ತಿಳಿಸುತ್ತಿತ್ತು. ಇನ್ನೇನು ಆರು ನಿಮಿಷದಲ್ಲಿ ನಾನು ಇಳಿಯುವ ನಿಲ್ದಾಣ ಬರುತ್ತದೆನ್ನುವಷ್ಟರಲ್ಲೇ ಆ ಬೋಗಿಗೇ ಹತ್ತಿದ್ದಳು ಅವಳು. ಒಂದು ಚೂರೂ ಬದಲಾಗಿಲ್ಲದ ಅವಳು.. ಅದೇ ಕಪ್ಪು ಕಂಗಳಿಗೆ ಕನ್ನಡಕ, ಅದೇ ಕಾಟನ್ ಸೀರೆ, ಅದೇ ಸರಳತೆ. ಥೇಟ್ ಆಗಿನಂತೆಯೇ.. ಬಂದವಳೇ ಕೈಯಲ್ಲಿ ಒಂದು ಪುಸ್ತಕ ಹಿಡಿದು ಕುಳಿತವಳೇ ಅದರೊಳಗೆ ಕಣ್ಣು ಕೀಲಿಸಿ ಇಹವನ್ನೇ ಮರೆತುಬಿಟ್ಟಳು. ನನ್ನನ್ನು ಮರೆತಂತೆ.. ನಾನು ಇಳಿಯುವ ನಿಲ್ದಾಣ ಬರುವಷ್ಟರಲ್ಲಿ ಅವಳನ್ನೊಮ್ಮೆ ಮಾತನಾಡಿಸೋಣ ಎಂದುಕೊಂಡರೆ ಕಾಲೇ ಬರುತ್ತಿಲ್ಲ. ಹಾಗೆಯೇ.. ಮಾತು..!


ಆ ನಿಲ್ದಾಣದಲ್ಲಿ ಅವಳೇ ಮೊದಲು ಇಳಿದಳು. ಜನಜಂಗುಳಿಯೊಳಗೆ ಕಳೆದು ಹೋದದ್ದು ನಾನೋ ಅವಳೋ ತಿಳಿಯಲಿಲ್ಲ. ತೆರೆದ ಮೆಟ್ರೋ ಬಾಗಿಲಿನ ಒಳಗೆ ಮುಂದಿನ ನಿಲ್ದಾಣಕ್ಕಾಗಿ ಕಾಯುತ್ತಿದ್ದವರು ಕಾಣುತ್ತಿದ್ದರು. ಯಾರ ಪಯಣ ಎಲ್ಲಿಗೋ.. ಎಂತೋ.. ಹೇಗೋ.. ನಮ್ಮ ನಮ್ಮ ನಿಲ್ದಾಣವೇ ನಿರ್ಧರಿಸಬೇಕಷ್ಟೇ..


~ವಿಭಾ ವಿಶ್ವನಾಥ್

ಲಕ್ಷ್ಮೀ ಕಟಾಕ್ಷ (ಬೆಳಕಿಂಡಿಯ ಕತೆಗಳು - 72)


ಹಾಗೆಲ್ಲಾ ಸುಮ್ಮನೆ ಲಕ್ಷ್ಮಿ ಒಲಿಯುವುದಿಲ್ಲ. ಸರಸ್ವತಿಯ ದಯೆಯಿಂದ ಲೆಕ್ಕ ಒಲಿದಾಗ, ಹಸಿವಿನ ದಾರಿದ್ರ್ಯ ನಿವಾರಿಸುವ ಅನ್ನಪೂರ್ಣೆಯ ದಯೆಯಿಂದ ಹಸಿದವರಿಗೆ ಎರಡು ತುತ್ತು ಅನ್ನ ಹಾಕುವ ಮನಸ್ಸಿದ್ದಾಗ, ಕಷ್ಟದಲ್ಲಿರುವವರೇ ದೇವರೆಂದು ತಿಳಿದು ಮಾನವೀಯತೆಯಿಂದ ಕೈಲಾದಷ್ಟು ಸಹಾಯಕ್ಕೆ ನಿಲ್ಲುವಾಗ ಲಕ್ಷ್ಮೀ ಕಟಾಕ್ಷ ತಾನಾಗಿಯೇ ಬರುತ್ತದೆ. 

ಅಂಗಡಿಯಲ್ಲಿ ಕೇವಲ ಹಣ ಸಂಪಾದನೆಯ ಗುರಿಯ ಬದಲಾಗಿ.. ಮನುಷ್ಯತ್ವ, ದಯೆ, ಬುದ್ಧಿವಂತಿಕೆ ರೂಢಿಸಿಕೊಂಡ. ಅಪ್ಪನ ಮಾತು ಹುಸಿಯಾಗಲಿಲ್ಲ.

~ವಿಭಾ ವಿಶ್ವನಾಥ್

ಶನಿವಾರ, ಆಗಸ್ಟ್ 15, 2026

ನನ್ನ ಮೆಚ್ಚಿನ ಸಾಧಕಿ (ಬೆಳಕಿಂಡಿಯ ಕತೆಗಳು - 71)

 


ಮಹಿಳಾ ದಿನಾಚರಣೆ ಪ್ರಯುಕ್ತ 'ನಿಮ್ಮ ನೆಚ್ಚಿನ ಸಾಧಕಿ' ಯಾರು ಎಂಬ ಪ್ರಶ್ನೆಗೆ ಎಲ್ಲರೂ ಶಾಲೆಯಲ್ಲಿ ವಿವಿಧ ಹೆಸರನ್ನು ಹೇಳತೊಡಗಿದರು ಸರೋಜಿನಿ ನಾಯ್ಡು, ಮಿಶೆಲ್ ಒಬಾಮಾ, ಸೈನಾ ನೆಹ್ವಾಲ್, ಸುಧಾ ಮೂರ್ತಿ, ಹಿಮಾ ದಾಸ್ ಹೀಗೆ ಒಬ್ಬೊಬ್ಬರೂ ಒಂದೊಂದು ಹೆಸರು ಹೇಳಿದರು.


ನನ್ನನ್ನು ಕೇಳಿದಾಗ ನಾನು ಹೇಳಿದ್ದು "ನನ್ನ ಮೆಚ್ಚಿನ ಸಾಧಕಿ ಅಮ್ಮ". ತಮ್ಮ ಮೆಚ್ಚಿನ ಕ್ಷೇತ್ರದಲ್ಲಿ ಸಾಧನೆ ಮಾಡುವವರು ಸಾಧಕರು. ಆದರೆ, ಅಂತಹಾ ಸಾಧನೆ ಮಾಡಲು ಪ್ರೇರೇಪಿಸುವವಳು, ಅಂತಹಾ ಹಾದಿಯಲ್ಲಿ ಸಹಕಾರ ನೀಡಿ ಬೆನ್ನೆಲುಬಾಗುವವಳು, ತನ್ನ ಆಸೆಯನ್ನೆಲ್ಲಾ ಬದಿಗೊತ್ತಿ ತಪಸ್ಸಿನಂತೆ ಮಕ್ಕಳ ಒಳಿತಿಗಾಗಿ ಎದುರು ನೋಡುವವಳೂ ಸಾಧಕಿಯೇ.. ಮಕ್ಕಳ ಸಾಧನೆಯ ತಪಸ್ಸಿನ ಸಲುವಾಗಿ ತಾನೇ ಹವಿಸ್ಸಾಗಿ ಸಮರ್ಪಿತವಾಗುವ ಅಮ್ಮನೇ ನಿಜವಾದ ಸಾಧಕಿ. ಈಗ ತರಗತಿಯಲ್ಲಿ ಚಪ್ಪಾಳೆಯ ದನಿ ಮುಗಿಲು ಮುಟ್ಟಿತ್ತು.


~ವಿಭಾ ವಿಶ್ವನಾಥ್

ಮರಳಿ ಮಣ್ಣಿಗೆ.. (ಬೆಳಕಿಂಡಿಯ ಕತೆಗಳು - 70)

 


ಹಳ್ಳಿಯ ಈ ಜೀವನ ನಿನಗೆ ಬೇಡಪ್ಪಾ.. ನಮ್ಮ ತಲೆಮಾರಿಗೇ ಇದು ಸಾಕು ಎನ್ನುತ್ತಾ ಹಳ್ಳಿಯಿಂದ ದೂರವಿಟ್ಟು ಮಗನನ್ನು ಓದಿಸಿದ ರಾಜೀವ. ಈ ಬೆಲೆ ಇಳಿಕೆ, ಹಕ್ಕಿಗಳ ಕಾಟ, ಬೆಳೆದ ಬೆಳೆಗೆ ಸರಿಯಾಗಿ ಸಿಗದ ಮಾರ್ಕೆಟ್ ಇದೆಲ್ಲವೂ ಅವನನ್ನು ಈ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಿತ್ತು. 


ಆದರೆ, ಅವನ ಮಗ ಜಗದೀಶನಿಗೆ ಯಾವಾಗಲೂ ಮಣ್ಣಿನ ಸೆಳೆತ. ಹಳ್ಳಿಯಲ್ಲಿ ನಾವು ಕಷ್ಟಪಟ್ಟು ದುಡಿದರೆ ಮಾತ್ರ ಎಲ್ಲರೂ ದಿಲ್ಲಿಯಲ್ಲಿ ದರ್ಬಾರ್ ನಡೆಸಲಿಕ್ಕಾಗುವುದು ಎನ್ನುತ್ತಾ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ತಂತ್ರಜ್ಞಾನವನ್ನು ಉಪಯೋಗಿಸಿ ಹಳ್ಳಿಯಲ್ಲಿನ ಎಲ್ಲರಿಗೂ ಕೆಲಸವನ್ನು ಸುಲಭ ಮಾಡಿ ಕೊಟ್ಟ. ಈಗ ರೈತರಿಂದ ನೇರವಾಗಿಯೇ ಬಳಕೆದಾರನಿಗೆ ದೊರೆಯುತ್ತಿದ್ದ ಫಸಲು ದಲ್ಲಾಳಿ ಹಾಗೂ ಬೆಲೆ ಇಳಿಕೆ ಸಮಸ್ಯೆಯನ್ನು ಪರಿಹರಿಸಿತ್ತು. ಸಾವಯವ ಕೃಷಿ ಕೂಡಾ ಲಾಭ ಕಾಣುವಂತೆ ಮಾಡಿತ್ತು. ಮಣ್ಣಿನಿಂದಲೇ ಎಲ್ಲರ ಬೆಳವಣಿಗೆ.. ನಾವೇನೇ ಪಡೆದರೂ ಮರಳಿ ಮಣ್ಣಿಗೇ ಅದನ್ನು ಅರ್ಪಿಸಿದರೆ ಅಭ್ಯುದಯ ಕಾಣಬಹುದು ಎಂದವನ ಮಾತು ಎಲ್ಲರ ಕಣ್ತೆರೆಸಿತ್ತು. ಅಂತೂ ಮರಳಿ ಮಣ್ಣಿಗೆ ಬಂದಿದ್ದ


~ವಿಭಾ ವಿಶ್ವನಾಥ್

ಆಕರ್ಷಕ ಬೆಳವಣಿಗೆ (ಬೆಳಕಿಂಡಿಯ ಕತೆಗಳು - 69)


 ಆಶಾ ಬೇಸಿಗೆ ರಜೆ, ದಸರಾ ರಜೆ ಸಿಕ್ಕಾಗಲೆಲ್ಲಾ ಸಿಟಿಯಲ್ಲಿ ದೊಡ್ಡಮ್ಮನ ಮನೆಗೆ ಹೋಗಿಬಿಡುತ್ತಿದ್ದಳು. ಅಲ್ಲಿನ ಸಮ್ಮರ್ ಕ್ಯಾಂಪ್ ಗೆ ಸೇರಿಕೊಂಡು ಅಲ್ಲಿನ ಮಲ್ಟಿಪ್ಲೆಕ್ಸ್, ಪಿಜ್ಜಾ, ಮಾಲ್ ಗಳಲ್ಲಿ ಸುತ್ತುತ್ತಾ ಅಲ್ಲಿನ ಜನಜೀವನಕ್ಕೆ ಹೊಂದಿಕೊಂಡು ಆಕರ್ಷಿತಳಾಗುತ್ತಿದ್ದರೆ ಆಕೆಯ ದೊಡ್ಡಮ್ಮನ ಮಗಳು ಉಷಾ ಸಿಟಿಯಿಂದ ಹಳ್ಳಿಗೆ ಬಂದು ಅಲ್ಲಿನ ಕೃಷಿ, ಹಸಿರಿನ ಪರಿಸರ, ತೊರೆಯಲ್ಲಿ ಆಟ, ಬೆಟ್ಟ-ಗುಡ್ಡ ಸುತ್ತುತ್ತಾ ರಾಗಿ ಮುದ್ದೆ, ಹಸಿಕಾಳು ಸಾರು, ನೊರೆ ಹಾಲು ಇವುಗಳಲ್ಲಿ ಆಕರ್ಷಣೆ ಕಂಡುಕೊಂಡಿದ್ದಳು.


ಇಬ್ಬರೂ ವಿರುದ್ಧ ಧೃವಗಳತ್ತ ಆಕರ್ಷಣೆ ಹೊಂದುತ್ತಾ ಆಶಾ ಹಳ್ಳಿಯಲ್ಲಿ ಸಿಟಿಯ ಬದುಕನ್ನು ಬದುಕುವ ಕೃತಕ ಪರಿಸರವನ್ನು ರೂಪಿಸಿಕೊಂಡಳು. ಆದರೆ, ಉಷಾ ಸಿಟಿಯಿಂದ ಕೊಂಚ ದೂರದಲ್ಲಿ ಆರ್ಗಾನಿಕ್ ಫಾರ್ಮಿಂಗ್ ಮಾಡುತ್ತಾ ಸಿಟಿ ಮಕ್ಕಳಿಗೆ ಹಳ್ಳಿಯ ವಾತಾವರಣದ ಆಕರ್ಷಣೆ ಮಾಡುತ್ತಾ ಅವರಿಗೆ ಕೃಷಿಯ ಅರಿವು ಮೂಡಿಸುತ್ತಿದ್ದಳು. 


~ವಿಭಾ ವಿಶ್ವನಾಥ್

ನೆಮ್ಮದಿ (ಬೆಳಕಿಂಡಿಯ ಕತೆಗಳು - 68)

 


ಭೂಮಿಕಾ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದವಳು, ಹಳ್ಳಿಯ ಪರಿಸರದ ಅರಿವೂ ಇರಲಿಲ್ಲ. ತಂದೆ-ತಾಯಿ ಕೆಲಸ, ಹಣ ಎಂದು ಹೊರಗಡೆಯೇ ಕಾಲ ಕಳೆಯುತ್ತಿರುವಾಗ ಅಜ್ಜಿ ಅವಳಿಗೆ ಅವಳಿಗೆ ಹಳ್ಳಿಯ ಪರಿಸರ ಮತ್ತು ಅನ್ಯೋನ್ಯತೆಯ ಬಗ್ಗೆ ತಿಳಿಸಿ ಅಲ್ಲಿಗೆ ಹೋಗುವ ಆಸೆ ಹುಟ್ಟಿಸಿದ್ದಳು. ಮಲ್ಟಿ ನ್ಯಾಷನಲ್ ಕಂಪೆನಿಯಲ್ಲಿ ದುಡಿಯುತ್ತಿದ್ದವಳಿಗೆ ಪ್ರಾಜೆಕ್ಟ್ ಒಂದರ ಮೇಲೆ ಹಳ್ಳಿಗೆ ಹೋಗುವ ಅವಕಾಶ ದೊರೆಯುತ್ತದೆ.

ಹಳ್ಳಿಗೆ ಹೋದವಳಿಗೆ ಅಲ್ಲಿನ ನೀರಿನ ಅಭಾವ, ಶೌಚಾಲಯದ ಕೊರತೆ, ಶಿಕ್ಷಣದ ಪರಿಸ್ಥಿತಿ ಮತ್ತು ಬಡತನದೊಂದಿಗೆ ಅವರ ಹಂಚಿ ತಿನ್ನುವ ಮತ್ತು ಹೊಂದಿ ಬಾಳುವ ಅನ್ಯೋನ್ಯತೆ ಮತ್ತು ಪ್ರೀತಿಯ ಅರಿವೂ ಆಗುತ್ತದೆ. ಪಟ್ಟಣದಲ್ಲಿ ಎಲ್ಲವೂ ಕೊರಗುವ ಮತ್ತು ಹಣದ ಹಿಂದೆ ಬಿದ್ದು ಪ್ರೀತಿಯ ಅರಿವೇ ಇಲ್ಲದ ಬಾಳುತ್ತಿರುವುದರ ಅರಿವಾಗುತ್ತದೆ. ಆದ್ದರಿಂದ ಹಳ್ಳಿಯಲ್ಲೇ ನೆಲೆಸಿ ಅವರ ಸಹಕಾರದೊಂದಿಗೆ ಮೂಲಭೂತ ಸೌಕರ್ಯಗಳನ್ನೆಲ್ಲಾ ಒದಗಿಸಿ ನೆಮ್ಮದಿಯಲ್ಲಿ ಅಲ್ಲೇ ನೆಲೆಸುತ್ತಾಳೆ. ಪಟ್ಟಣದಲ್ಲಿನ ಹಣಕ್ಕಿಂತ, ಹಳ್ಳಿಯಲ್ಲಿನ ಸಹಕಾರ, ಪ್ರೀತಿಯಲ್ಲಿ ನೆಮ್ಮದಿಯಿದೆ ಎಂಬುದನ್ನು ಅರಿಯುತ್ತಾಳೆ.


~ವಿಭಾ ವಿಶ್ವನಾಥ್

ಭಾನುವಾರ, ಆಗಸ್ಟ್ 9, 2026

ಸಕ್ಕರೆ ನಿದ್ದೆಯ ದೇವರ ನಗು (ಬೆಳಕಿಂಡಿಯ ಕತೆಗಳು - 67)


 "ಅಮ್ಮನ ಅತಿ ಇಷ್ಟದ ನಗು ಯಾವುದು ಗೊತ್ತಾ..?" 

"ಯಾವುದು..?"

"ಕಂದಮ್ಮ ಸಕ್ಕರೆ ನಿದ್ದೆಯ ಸವಿಯಲ್ಲಿ ಮಂದಹಾಸ ಬೀರುವ ಅರೆ ಕ್ಷಣದ ನಗು, ದೃಷ್ಟಿಯಾಗುತ್ತದೆ ನೋಡಬೇಡ ಎಂದದ್ದನ್ನು ಬದಿಗೊತ್ತಿ ಕಾಯುತ್ತಿದ್ದ ಕಳೆದೇ ಹೋಗುವಂತೆ ಮಾಡುತ್ತಿದ್ದ ನಗು"


ಅವಳೇ ಕಟ್ಟಿ ಹಾಡುತ್ತಿದ್ದ ಲಾಲಿಯಲ್ಲಿ ಈ ಸಾಲುಗಳು ಇಂದಿಗೂ ಅತ್ಯಾಪ್ತ

ಜೋ ಜೋ ಲಾಲಿ ಕಂದಮ್ಮ..

ಅಮ್ಮನ ಕಣ್ಮಣಿ ನೀನಮ್ಮ..

ಸಕ್ಕರೆ ನಿದ್ದೆ ಮಾಡಮ್ಮಾ..

ಕನಸಿನ ಲೋಕಕೆ ಜಾರಮ್ಮಾ..


ಲಾಲಿ ಹಾಡು ಸಾಗುತ್ತಿತ್ತು..!

~ವಿಭಾ ವಿಶ್ವನಾಥ್

ಗೀಳಿಗೊಂದು ಬ್ರೇಕ್ (ಬೆಳಕಿಂಡಿಯ ಕತೆಗಳು - 66)

 


"ನಾನೂ ನಿನ್ನಂತೆ ಪುಸ್ತಕ ಓದಬೇಕು, ಏನಾದರೂ ಬರೆಯಬೇಕು. ಇದಕ್ಕೆಲ್ಲಾ ಹೇಗೆ ಸಮಯ ಹೊಂದಿಸುತ್ತೀಯ" ಎಂದು ಪ್ರಶ್ನೆ ಕೇಳಿದ ಗೆಳತಿಗೆ ಉತ್ತರ ಕೇಳುವ ಸಂಯಮವೂ ಇರದೆ ಮೊಬೈಲ್ ನಲ್ಲಿ ಸ್ಕ್ರೋಲ್ ಮಾಡುತ್ತಾ ಕಳೆದುಹೋಗಿದ್ದಳು. 

"ಮೊಬೈಲ್ ಬಿಟ್ಟರೆ ಎಲ್ಲಕ್ಕೂ ಸಮಯ ಹೊಂದಿಸಿಕೊಳ್ಳಬಹುದು" ಎಂದು ಅವಳ ಫೋನ್ ಕಿತ್ತು ತನ್ನ ಬ್ಯಾಗ್ ನಲ್ಲಿ ಹಾಕಿಕೊಂಡವಳು ಗೆಳತಿಯ ಅತಿಯಾದ ಮೊಬೈಲ್ ಗೀಳಿಗೆ ಬ್ರೇಕ್ ಹಾಕುವುದರಲಿದ್ದರೆ.. ಇನ್ನಾದರೂ ಸಂಯಮ ರೂಢಿಸಿಕೊಂಡು ಬದಲಾಗಬೇಕು ಎನ್ನುವ ಆಲೋಚನೆಯಲ್ಲಿದ್ದಳು ಗೆಳತಿ.

~ವಿಭಾ ವಿಶ್ವನಾಥ್

ಉಡುಗೊರೆಯ ಸಮಯ (ಬೆಳಕಿಂಡಿಯ ಕತೆಗಳು - 65)

 


"ನಾಳೆ ನಿನ್ನ ಹುಟ್ಟುಹಬ್ಬಕ್ಕೆ ಏನು ಉಡುಗೊರೆ ಬೇಕು ಕೇಳು ಕೊಡಿಸುತ್ತೇನೆ, ಅಷ್ಟು ಖರ್ಚಾದರೂ ಪರವಾಗಿಲ್ಲ" ಎಂದವನ ಮಾತು 'ಯಾವ ವರ ಕೇಳುವೆಯೋ ಕೇಳು. ತಥಾಸ್ತು' ಎಂಬಂತೆ ಭಾಸವಾಗಿತ್ತು.

ಬೆಲೆಬಾಳುವ ಉಡುಗೊರೆಗಿಂತ ಅವನ ಜೊತೆ ಸಮಯ ಕಳೆಯುವುದು ಮುಖ್ಯವಾಗಿತ್ತು ಅವಳಿಗೆ. ಆದರೆ, ಅವನ ಬ್ಯುಸಿ ಶೆಡ್ಯೂಲ್ ಅನ್ನು ಬ್ರೇಕ್ ಮಾಡುವ ಮನಸ್ಸಿರಲಿಲ್ಲ

"ಏನಿಲ್ಲ" ಎಂದು ಚುಟುಕಾಗಿ ಮಾತು ಮುಗಿಸಿದವಳಿಗೆ "ನಾಳೆ ಇಡೀ ದಿನ ನಿನ್ನದೇ" ಎಂದು ಕಣ್ಣು ಮಿಟುಕಿಸಿದವನನ್ನು ಕಂಡು ಇಚ್ಚೆಯನರಿತು ನಡೆವ ಪತಿ, ಅವನ ಜೊತೆಗಿನ ಸಮಯಕ್ಕಿಂತ ಮಿಗಿಲಾದ ಉಡುಗೊರೆ ಬೇರೇನು ಎನ್ನಿಸಿತ್ತು.

~ವಿಭಾ ವಿಶ್ವನಾಥ್


ಪ್ರಾರ್ಥನೆ (ಬೆಳಕಿಂಡಿಯ ಕತೆಗಳು - 64)

 


ಯುದ್ದದ ಹೆಸರು ಮನದಲ್ಲಿ ತಲ್ಲಣ ಮೂಡಿಸುತ್ತಿತ್ತು. ಇತ್ತೀಚಿನ ಜಾಗತಿಕ ಬೆಳವಣಿಗೆಗಳ ವಾರ್ತೆ ನಿತ್ಯವೂ ಟಿ. ವಿ, ಪೇಪರ್, ಸೋಶಿಯಲ್ ಮೀಡಿಯಾಗಳಲ್ಲಿ ಕಂಡು ಅಗತ್ಯಕ್ಕಿಂತ ಹೆಚ್ಚೇ ಕಳವಳವಾಗುತ್ತಿತ್ತು.

ಇಂದು ಮಾತ್ರವಲ್ಲ ಎಂದಿಗೂ ಯುದ್ದದ ನೆನಪೆಂದರೆ ಅವಳಿಗೆ ಸದಾ ಆತಂಕವೇ.. ರಾಮಾಯಣ, ಮಹಾಭಾರತದ ಯುದ್ಧ, ಕಾರ್ಗಿಲ್ ಯುದ್ಧ, ಹಿರೋಶಿಮಾ, ನಾಗಾಸಾಕಿಯ ದಾಳಿಗಳು ಎಲ್ಲವೂ.. 

ಅಷ್ಟಕ್ಕೂ ಅವಳಿಗೆ ಕಳೆದುಕೊಳ್ಳುವಂತಹದ್ದು ಏನೂ ಇರಲಿಲ್ಲ. ಯಾರೂ ಇರಲಿಲ್ಲ. ಗಂಡ, ಮಗ ಇಬ್ಬರನ್ನೂ ದೇಶಕ್ಕಾಗಿ ಅರ್ಪಿಸಿದವಳು "ಎಲ್ಲ ತಾಯಂದಿರ ಮಕ್ಕಳೂ ಸುಖವಾಗಿರಲಿ, ಸೌಖ್ಯದಿಂದಿರಲಿ" ಎಂದಷ್ಟೇ ಪ್ರಾರ್ಥಿಸುತ್ತಾಳೆ.

~ವಿಭಾ ವಿಶ್ವನಾಥ್

ಭರವಸೆ (ಬೆಳಕಿಂಡಿಯ ಕತೆಗಳು - 63)


 ನಮ್ಮ ಆಚಾರ-ವಿಚಾರ ತಿಳಿಯದ ಫಾರಿನ್ ಹುಡುಗಿಯನ್ನು ಮನೆ ಸೊಸೆ ಎಂದು ಒಪ್ಪುವುದಾದರೂ ಹೇಗೆ ಎಂದು ಹಿಂಜರಿಯುತ್ತಿದ್ದ ಅಪ್ಪ-ಅಮ್ಮನಿಗೆ ಅಂದು ತಮ್ಮ ಪ್ರೀತಿಯ ಆಳ ಅರ್ಥ ಮಾಡಿಸಿದ್ದ ಮಗ. ಮನಸ್ಸಿಲ್ಲದ ಮನಸ್ಸಿನಲ್ಲಿ ಒಪ್ಪಿದ್ದವರಿಗೆ ಇಂದು ಸೊಸೆಯ ಮೌಲ್ಯ ಅರ್ಥವಾಗಿತ್ತು.

ಗೊತ್ತಿಲ್ಲದಿದ್ದರೂ ಎಲ್ಲವನ್ನೂ ಕಲಿತು ತಮ್ಮ ಆಚಾರ-ವಿಚಾರವನ್ನು ಕಲಿತು ಪ್ರೀತಿಯಿಂದ ಒಪ್ಪಿ ಅಪ್ಪಿರುವ ಸೊಸೆ ಹೆಮ್ಮೆ ಮೂಡಿಸಿದ್ದಳು. ಬದಲಾಗುತ್ತಿರುವುದು ಯುವ ಜನತೆಯ ಮತ್ತೊಂದು ಮಜಲು ಭರವಸೆ ಮೂಡಿಸಿತ್ತು.

~ವಿಭಾ ವಿಶ್ವನಾಥ್